,ಮೇ.27:ಕರ್ನಾಟಕ ರಾಜಕೀಯದ ‘ಮಹಾ ಕುರುಕ್ಷೇತ್ರ’ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಕಳೆದ ಕೆಲವು ದಿನಗಳಿಂದ ಸದ್ದಿಲ್ಲದೆ ನಡೆಯುತ್ತಿದ್ದ ಅಧಿಕಾರದ ಆಟ ಈಗ ಬಹಿರಂಗವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ
Thank you for reading this post, don't forget to subscribe!ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಜೊತೆ ಮಹತ್ವದ ಸಂಧಾನ ನಡೆಸಿ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಳೆ (ಗುರುವಾರ) ಬೆಂಗಳೂರಿನಲ್ಲಿ ತಮ್ಮ ಸರ್ಕಾರದ ಎಲ್ಲಾ ಸಚಿವರು ಹಾಗೂ ಶಾಸಕರಿಗೆ ಹಠಾತ್ ‘ಬ್ರೇಕ್ಫಾಸ್ಟ್ ಮೀಟಿಂಗ್’ (ಉಪಹಾರ ಕೂಟ) ಕರೆದಿದ್ದಾರೆ. ಇದರ ಬೆನ್ನಲ್ಲೇ ಅವರು ರಾಜ್ಯಪಾಲರ ಭೇಟಿಗೆ ಸಮಯ ಕೇಳಿರುವುದು ಸಿಎಂ ರಾಜೀನಾಮೆ ಫಿಕ್ಸ್ ಎಂಬ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದೆ.
ವರದಿಗಳ ಪ್ರಕಾರ, ಹೈಕಮಾಂಡ್ ನಾಯಕರೊಂದಿಗಿನ ಚರ್ಚೆಯ ವೇಳೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಮುಂದೆ ಬಿಗ್ ಷರತ್ತೊಂದನ್ನು ಇಟ್ಟಿದ್ದಾರೆ ಎನ್ನಲಾಗಿದೆ.ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಗೌರವ ಕೊಟ್ಟು ನಾನು ಮುಖ್ಯಮಂತ್ರಿ ಗಾದಿ ಬಿಡಲು ಸಿದ್ಧ. ಆದರೆ, ನನ್ನ ಸೀಟಿನಲ್ಲಿ ಮುಂದಿನ ಸಿಎಂ ಆಗಿ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರನ್ನೇ ಕೂರಿಸಬೇಕು,” ಎಂದು ಸಿದ್ದರಾಮಯ್ಯ ನೇರವಾಗಿಯೇ ಹಠ ಹಿಡಿದಿದ್ದಾರೆ ಎನ್ನಲಾಗಿದೆ.
ಮುಂದಿನ ಸಿಎಂ ರೇಸ್ ಗೆ ಜಿ. ಪರಮೇಶ್ವರ್ ಅವರ ಹೆಸರನ್ನು ಸಿದ್ದರಾಮಯ್ಯ ಹೈಲೈಟ್ ಮಾಡಿರುವುದರ ಹಿಂದೆ ದೊಡ್ಡ ರಾಜಕೀಯ ತಂತ್ರಗಾರಿಕೆಯೇ ಅಡಗಿದೆ. ಪರಮೇಶ್ವರ್ ಅವರಿಗೆ ಇರುವ ದಶಕಗಳ ರಾಜಕೀಯ ಅನುಭವ, ಈ ಹಿಂದೆ ಸುದೀರ್ಘ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ ಇತಿಹಾಸ ಮತ್ತು ಅವರ ಕ್ಲೀನ್ ಇಮೇಜ್ ಆಡಳಿತವನ್ನು ಸಿದ್ದರಾಮಯ್ಯ ಹೈಕಮಾಂಡ್ ನಾಯಕರಿಗೆ ನೆನಪಿಸಿದ್ದಾರೆ. ಅನುಭವ ಮತ್ತು ಅರ್ಹತೆಯ ಆಧಾರದ ಮೇಲೆ ಪರಮೇಶ್ವರ್ ಅವರೇ ಈ ಸ್ಥಾನಕ್ಕೆ ನೂರಕ್ಕೆ ನೂರು ಸೂಕ್ತ ವ್ಯಕ್ತಿ ಎಂಬುದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಪರಮೇಶ್ವರ್ ಅವರ ಹೆಸರನ್ನು ಸಿದ್ದರಾಮಯ್ಯ ಪ್ರಸ್ತಾಪಿಸಲು ಕಾರಣಗಳು
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಈ ನಿರ್ಧಾರವು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಅಧಿಕಾರ ಹಸ್ತಾಂತರ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವಾಗಿದೆ
ಅಹಿಂದ ಒಳ ಏಟು
ಸಿದ್ದರಾಮಯ್ಯ ಅವರು ಅಹಿಂದ ವರ್ಗದ ನಾಯಕ. ಕಾಂಗ್ರೆಸ್ಗೆ ಬೆನ್ನೆಲುಬಾಗಿರುವ ಅಹಿಂದವನ್ನು ಕೆಣಕಿದರೆ ಅದರಿಂದ ಭವಿಷ್ಯದಲ್ಲಿ ಸಮಸ್ಯೆ ಆಗಬಹುದು ಎಂಬ ಆತಂಕ ಕಾಂಗ್ರೆಸ್ ನಾಯಕರಿಗೆ ಇದೆ. ಹೀಗಾಗಿ ಅಹಿಂದ ವರ್ಗದ ವಿರೋಧ ಶಮನ ಮಾಡುವುದು ಬಹುಮುಖ್ಯವಾಗಿದೆ. ಹಾಗಾಗಿ ಈ ಲೆಕ್ಕಾಚಾರ ಇಟ್ಟುಕೊಂಡೇ ಹೈಕಮಾಂಡ್ ನಾಯಕರು ಈ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೂ ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಗೌರವಯುತವಾಗಿ ನಡೆಸಿಕೊಳ್ಳುವುದು ಹೈಕಮಾಂಡ್ ಮುಂದಿರುವ ಲೆಕ್ಕಾಚಾರವಾಗಿದೆ. ಹೈಕಮಾಂಡ್ ಒತ್ತಡದಿಂದ ರಾಜೀನಾಮೆ ಕೊಟ್ಟಿದ್ದಾರೆ ಅಭಿಪ್ರಾಯ ಹೊರಬಿದ್ದರೆ ಅದು ಕಾಂಗ್ರೆಸ್ಗೆ ಒಳ ಹೊಡೆತ ನೀಡಲಿದೆ. ಹೀಗಾಗಿ ಅಳೆದು ತೂಗಿ ಎಚ್ಚರಿಕೆಯ ಹೆಜ್ಜೆಯನ್ನು ಹೈಕಮಾಂಡ್ ಇಡುವ ಸಾಧ್ಯತೆ ಇದೆ.
ಹೊಸ ನಾಯಕರ ಆಯ್ಕೆ ಸವಾಲು!
ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಲ್ಲಿ ಸಿಎಂ ಸ್ಥಾನ ಡಿಕೆ ಶಿವಕುಮಾರ್ ಅವರಿಗೆ ಎಂಬುವುದು ಬಹುತೇಕ ಖಚಿತ. ರಾಜೀನಾಮೆ ನೀಡುವ ಸಂದರ್ಭದ ಸೃಷ್ಟಿಯಾಗಿರುವುದೇ ಡಿಕೆ ಶಿವಕುಮಾರ್ ಒತ್ತಡದಿಂದ ಎಂಬುವುದು ವಾಸ್ತವ. ಹಾಗಾಗಿ ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನದ ಫ್ರಂಟ್ ರನ್ನರ್. ಆದರೆ, ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ವಿಚಾರವಾಗಿ ಆಂತರಿಕವಾಗಿ ಸಾಕಷ್ಟು ಭಿನ್ನಾಭಿಪ್ರಾಯ ಇದೆ. ಇದೇ ಕಾರಣಕ್ಕಾಗಿ ದಲಿತ ಸಿಎಂ ಎಂಬ ವಿಚಾರವನ್ನು ಸಿದ್ದರಾಮಯ್ಯ ಅಪ್ತರು ಮುನ್ನಲೆಗೆ ತರುತ್ತಿದ್ದಾರೆ. ಸಿದ್ದರಾಮಯ್ಯ ಅವರ ಜೊತೆಗೆ ಡಾ. ಜಿ ಪರಮೇಶ್ವರ್ ಅವರು ದೆಹಲಿಗೆ ಇದೇ ಕಾರಣಕ್ಕಾಗಿ ತೆರಳಿದ್ದರು.
ಹಾಗಾಗಿ ಹೊಸ ನಾಯಕರ ಆಯ್ಕೆ ಸಂದರ್ಭದಲ್ಲಿ ಹೈಕಮಾಂಡ್ ಸಾಕಷ್ಟು ಎಚ್ಚರಿಕೆಯ ಹೆಜ್ಜೆಯನ್ನು ಇಡಲಿದೆ. ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಿದ್ದಲ್ಲಿ ಅದು ಗೊಂದಲಕ್ಕೆ ಅವಕಾಶ ನೀಡದಂತೆ ಎಚ್ಚರಿಕೆಯ ಕ್ರಮಗಳನ್ನು ವಹಿಸಲಿದ್ದಾರೆ. 4 ಡಿಸಿಎಂ ಸ್ಥಾನಗಳನ್ನು ಸೃಷ್ಟಿ ಮಾಡುವ ಮೂಲಕ ಗೊಂದಲ ಬಗೆಹರಿಸುವ ಲೆಕ್ಕಾಚಾರವೂ ಹೈಕಮಾಂಡ್ ಮುಂದೆ ಇದೆ.
ಸಿದ್ದರಾಮಯ್ಯಗೆ ಯಾವ ಸ್ಥಾನ ಮಾನ
ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟಲ್ಲಿ ಅವರಿಗೆ ಯಾವ ಸ್ಥಾನಮಾನ ಎಂಬುವುದು ಸದ್ಯದ ಕುತೂಹಲ. ಸಿದ್ದರಾಮಯ್ಯ ಅವರು ಹಿಂದುಳಿಗ ವರ್ಗಗಳ ಪ್ರಭಾವಿ ನಾಯಕರಾಗಿರುವ ಹಿನ್ನೆಲೆಯಲ್ಲಿ ಅವರ ಸೇವೆಯನ್ನು ರಾಷ್ಟ್ರ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುವ ಲೆಕ್ಕಾಚಾರ ಇದೆ. ಆದರೆ, ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಒಗ್ಗಿಕೊಳ್ಳುವವರಲ್ಲ ಎಂಬುವುದು ಅವರ ಆಪ್ತರಿಂದ ಕೇಳಿ ಬರುತ್ತಿರುವ ಮಾತುಗಳು.
ಸದ್ಯ ರಾಜ್ಯಸಭೆ ಸದಸ್ಯ ಸ್ಥಾನದ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಬಳಕೆ ಮಾಡುವ ಲೆಕ್ಕಾಚಾರ ಇದೆ. ಆದರೆ ಇದಕ್ಕೆ ಸಿದ್ದರಾಮಯ್ಯ ಒಪ್ಪಿಕೊಳ್ಳುತ್ತಾರಾ? ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಹೈಕಮಾಂಡ್ ಈ ಆಫರ್ ಒಪ್ಪಿಕೊಳ್ಳದೆ ರಾಜ್ಯದಲ್ಲಿ ಉಳಿದರೆ ಅದು ಸಮಸ್ಯೆ ಸೃಷ್ಟಿಗೆ ಕಾರಣ ಆಗಬಹುದು.
ಸಿದ್ದರಾಮಯ್ಯ ಪರವಾಗಿ ಸಚಿವರು, ಶಾಸಕರ ದಂಡಿದೆ. ಹಾಗಾಗಿ ಸಿದ್ದರಾಮಯ್ಯ ಒಪ್ಪದವರಿಗೆ ಸಿಎಂ ಸ್ಥಾನ ನೀಡಿದರೆ ಈ ಬಣದ ಅಸಮಾಧಾನ ಜೋರಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅಧಿಕಾರದಿಂದ ದೂರ ಉಳಿದರೂ ಅದೊಂದು ಪವರ್ ಸೆಂಟರ್ ಅಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಇಂತಹ ಗೊಂದಲಕ್ಕೆ ಅವಕಾಶ ಕೊಡದೆ ಸಮಸ್ಯೆಯನ್ನು ಯಾವ ರೀತಿಯಲ್ಲಿ ಹೈಕಮಾಂಡ್ ಬಗೆಹರಿಯುತ್ತೆ ಎಂಬುವುದು ಸದ್ಯದ ಸವಾಲು.
2028ರ ಸವಾಲು
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಒಂದು ರೀತಿಯಲ್ಲಿ ಜೇನು ಗೂಡಿಗೆ ಕೈಹಾಕಿದಂತೆ. ಇದು ಅಂದುಕೊಂಡಂತೆ ಸುಲಭವಲ್ಲ. ಇನ್ನುಳಿದ 2 ವರ್ಷಗಳು ರಾಜ್ಯದಲ್ಲಿ ಕಾಂಗ್ರೆಸ್ ಪಾಲಿಗೆ ಬಹುದೊಡ್ಡ ಸವಾಲಿನ ಸಂಗತಿಯಾಗಿದೆ. ಹಾಗಾಗಿ ಗೊಂದಲಕ್ಕೆ ಅವಕಾಶ ಕೊಟ್ಟರೆ ಅದು ಪಕ್ಷಕ್ಕೆ ಒಳೇಟು ನೀಡುವ ಸಾಧ್ಯತೆ ಇದೆ. 2028ರಲ್ಲಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಎಲ್ಲವನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವುದು ಅತ್ಯಗತ್ಯ. ಸಿದ್ದರಾಮಯ್ಯ ಅವರ ಸಹಕಾರ ಇಲ್ಲದೆ ರಾಜ್ಯದಲ್ಲಿ ಹೈಕಮಾಂಡ್ ತನ್ನದೇ ಹೆಜ್ಜೆಯನ್ನು ಇಡುವ ಸಾಧ್ಯತೆ ಕಡಿಮೆ ಇದೆ. ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ ದಿಢೀರ್ ಆಗಿ ರಾಜೀನಾಮೆ ಕೊಡಲು ಸೂಚನೆ ನೀಡಿದ ಪರಿಣಾಮ 2023ರ ವಿಧಾನಸಭೆ ಚುನಾವಣೆಯಲ್ಲಿ ಎದುರಿಸಬೇಕಾಗಿ ಬಂದಿತ್ತು. ಕಾರಣಕ್ಕಾಗಿ ಮತ್ತೆ ಬಿಜೆಪಿ ವರಿಷ್ಠರು ಬಿಎಸ್ವೈಗೆ ಮಣೆ ಹಾಕಿದ್ದರು.
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಪ್ರಭಾವ ಇದೆ. ಅವರ ವಿರುದ್ಧ ಗಂಭೀರ ಆರೋಪಗಳು ಇಲ್ಲ, ಆರೋಗ್ಯವೂ ಉತ್ತಮವಾಗಿದೆ. ಹಾಗಾಗಿ ಸಿಎಂ ಸ್ಥಾನದಿಂದ ರಾಜೀನಾಮೆ ಕೊಡಿಸಿವಂತಹ ಅನಿವಾರ್ಯತೆಯ ವಾತಾವರಣವೂ ಇಲ್ಲ. ಹಾಗಿದ್ದರೂ ಹೈಕಮಾಂಡ್ ಸೂಚನೆ ನೀಡಿರುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ರಾಜೀನಾಮೆ ಕೊಟ್ಟಲ್ಲಿ ಅದು ಮುಂದಿನ ದಿನಗಳಲ್ಲಿ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆ ಅಲ್ಲಗಳೆಯುವ ಹಾಗಿಲ್ಲ. ಹಾಗಾಗಿ, ಈ ಎಲ್ಲಾ ಪರಿಣಾಮಗಳನ್ನು ಹೈಕಮಾಂಡ್ ಯಾವ ರೀತಿಯಲ್ಲಿ ಎದುರಿಸಲಿದೆ ಎಂಬುವುದು ಸದ್ಯಕ್ಕೆ ಕುತೂಹಲ ಕೆರಳಿಸಿದೆ.
ಓದುಗರಲ್ಲಿ ವಿನಂತಿ
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
https://chat.whatsapp.com/FM1qVgdNtJm5m1M9SL0BHc?mode