Categories: informationMotivation

IAS: ರಿಕ್ಷಾ ಚಾಲಕನ ಮಗ IAS ಅಧಿಕಾರಿಯೇ ಆಗಿಬಿಟ್ಟ!!

Spread the love

ಸ್ನೇಹಿತರೆ ಯಶಸ್ಸು ಎಂದರೇನೇ ಹಾಗೆ. ಅದು ಸಿರಿವಂತಿಕೆಯನ್ನು ನೋಡಿ ಬರುವುದಿಲ್ಲ. ಅದು ರೂಪ ಅಲಂಕಾರಗಳನ್ನು ನೋಡಿ ನಿಮ್ಮ ಹಿಂದೆ ಬರುವುದಿಲ್ಲ. ಅದು ಕೇವಲ ಜ್ಞಾನದ ಹಸಿವು, ಕಲಿಕೆಯ ತೃಷೆ, ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧರಿರುವ ಉತ್ಸಾಹಿಗಳನ್ನು ಮಾತ್ರ ಬೆನ್ನತ್ತಿ ಬರುತ್ತದೆ. ಸಾಗರವೇ ಆಗಿಬಿಟ್ಟಿರುವ ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈಜಿ ದಡ ಸೇರಬೇಕೆನ್ನುವವರ ಸಂಖ್ಯೆ ಲಕ್ಷಾಂತರವಿದೆ. ಆದರೆ ಅವರಲ್ಲಿ ಕೇವಲ ಈ ಸಾಗರದಲ್ಲಿ ಏಳುವ ಚಂಡಮಾರುತದ ಅಲೆಗಳಿಗೆ ಎದೆಯೊಡ್ಡಿ ಯಾರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಭಟ್ಟಿ ಇಳಿಸಿ ಈಜುತ್ತಾರೋ ಅವರು ಮಾತ್ರ ಯಶಸ್ವಿಯಾಗಿ ದಡವನ್ನು ಸೇರಬಲ್ಲರು. ಎಲ್ಲರಿಗೂ ಸರ್ಕಾರಿ ನೌಕರಿ ಒಂದು ಸಿಕ್ಕರೆ ಸಾಕು ಅಲ್ಲಿಗೆ ಬದುಕು ಒಂದು ಸೇಫ್ ಜೋನಿಗೆ ಬಂದಂತಾಗುತ್ತದೆ. ಇನ್ನು ತಮಗೆ ಒಳ್ಳೆಯ ಹುಡುಗಿ ಸಿಗುತ್ತಾಳೆ, ಮುಂದೆ ಜೀವನವನ್ನು ಸುಖದಾಯಕವಾಗಿ ಕಳೆಯಬಹುದು ಎಂಬ ಭಾವನೆ ಸಹಜವಾಗಿಯೇ ಮನೆ ಮಾಡಿರುತ್ತದೆ. ಇದಕ್ಕೆ ಮತ್ತಷ್ಟು ಕಿಚ್ಚು ಹಚ್ಚುವುದು ಓರಗೆಯವರು ಯಾವುದಾದರೂ ಒಂದು ಕಂಪನಿಯಲ್ಲಿಯೋ ಅಥವಾ ಸರ್ಕಾರಿ ನೌಕರಿಗೆ ಸೇರಿಕೊಂಡಾಗ. ದೊಡ್ಡದೊಂದು ನೌಕರಿಯ ಬೆನ್ನತ್ತಿ ಹೊರಟ ನಿಮಗೆ ನಿಮ್ಮದೇ ಕ್ಲಾಸಿನಲ್ಲಿ ಲಾಸ್ಟ್ ಬೆಂಚಿನಲ್ಲಿ ಕುಳಿತು ಹುಡುಗಿಯರತ್ತ ಪೇಪರ್ ರಾಕೆಟ್ ಬಿಟ್ಟು ಇಲ್ಲ ಪಾಠ ಮಾಡುವಾಗ ಮೇಷ್ಟ್ರುಗಳನ್ನ ಆಡಿಕೊಂಡು ತರ್ಲೆ ಮಾಡಿ ಎಲ್ಲರಿಂದಲೂ ಬೈಸಿಕೊಂಡು ಓಡಾಡಿಕೊಂಡಿದ್ದ ನಿಮ್ಮ ತರ್ಲೆ ಗೆಳೆಯಾ ಈಗ ಯಾವುದೋ ಒಂದು ಕಂಪನಿಯಲ್ಲಿ ಸೇರಿಕೊಂಡು ನೀವು ತಿಂಗಳಿಗೆ ಓದಲು ಖರ್ಚು ಮಾಡುವ ಹಣದಷ್ಟು ಆತ ಗಳಿಸುತ್ತಿದ್ದಾನೆ ನೀನೇನು ಇನ್ನೂ ಓದುವುದರಲ್ಲಿ ಆಯಸ್ಸು ಕಳೆಯುತ್ತಿರುವೆಯಲ್ಲ ಎಂದು ನಿಮ್ಮ ನೆಂಟರು ದೂರದ ಸಂಬಂಧಿಗಳು ಹಬ್ಬಕ್ಕೋ ಹುಣ್ಣಿಮೆಗೋ ನಿಮ್ಮ ಮನೆಗೆ ಬಂದಾಗ ಹೀಗೆ ಹೇಳುವುದು ಸಹಜ. ಇನ್ನು ನಿಮ್ಮ ನೆರೆಹೊರೆಯವರಿಗಂತೂ ನಿಮ್ಮ ತಂದೆ ತಾಯಿಗೆ ಇರದಷ್ಟು ಚಿಂತೆ ಅವರಿಗೆ ನಿಮ್ಮ ಮೇಲೆ ಇರುತ್ತದೆ. ಹೀಗೆ ಎಲ್ಲರಿಂದಲೂ ಒಂದು ನೌಕರಿಗಾಗಿ ಕೇಳಬಾರದ ಮಾತುಗಳನ್ನ ಕೇಳಿಸಿಕೊಂಡು ಅನುಭವಿಸಲಾಗದ ನೋವನ್ನ ನುಂಗಿಕೊಂಡು ಊರು ಬಿಟ್ಟು ಏನಾದರೂ ಒಂದು ಸಾಧಿಸಿಯೇ ಮರಳಿ ಮನೆಗೆ ತೆರಳುತ್ತೇನೆ ಎಂದು ಹಠಪಟ್ಟು ಹಗಲಿನಲ್ಲಿಯೇ ಊರು ಬಿಟ್ಟು ಸಾಧನೆಯ ಬೆನ್ನತ್ತಿರುವ ಎಲ್ಲಾ ಸ್ಪರ್ಧಾ ಕಲಿಗಳಿಗೆ ಸ್ಫೂರ್ತಿ ನೀಡುವಂತಹ ಕಥೆ ಇದು. ಸುಮ್ಮನೆ ಓದುತ್ತಾ ಹೋಗಿ ಪೂರ್ತಿ ಕಥೆ ಓದಿದ ಬಳಿಕ ನಿಮ್ಮ ಮನಸ್ಸಿನಲಿ ಒಂದು ಕಿಚ್ಚು ಹೊತ್ತಿಕೊಂಡರೆ ಅಲ್ಲಿಗೆ ಈ ಅಂಕಣ ಸಾರ್ಥಕ.

Thank you for reading this post, don't forget to subscribe!

ಸ್ನೇಹಿತರೆ ಇದು ಹಳ್ಳಿಯ ರಿಕ್ಷಾ ಚಾಲಕನ ಮಗನೊಬ್ಬ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಿ ಜಿಲ್ಲಾಧಿಕಾರಿಯದ ಸ್ಫೂರ್ತಿಯ ಕಥೆ. UPSC ಅಂದರೆ Union Public Service Commission (ಕೇಂದ್ರ ಸೇವಾ ಆಯೋಗ ) ಪ್ರತಿ ವರ್ಷ ನಡೆಸುವ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಸರಾಸರಿ 800 ರಿಂದ 1000 ಹುದ್ದೆಗಳು ಖಾಲಿ ಇರುತ್ತದೆ ಇವು ಉನ್ನತ ದರ್ಜೆಯ ಹುದ್ದೆಗಳಾದ್ದರಿಂದ ಸಹಜವಾಗಿಯೇ ಈ ಪರೀಕ್ಷೆಯಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆಯನ್ನು ನಾವು ನೋಡಬಹುದು. ಇರುವ 800 ರಿಂದ ಒಂದು ಸಾವಿರ ಹುದ್ದೆಗಳಿಗೆ ಪ್ರತಿವರ್ಷ ಕನಿಷ್ಠ ಪಕ್ಷ ಏನಿಲ್ಲವೆಂದರೂ ಆರರಿಂದ ಎಂಟು ಲಕ್ಷ ಸ್ಪರ್ಧಾಕಾಂಕ್ಷಿಗಳು ಈ ಪರೀಕ್ಷೆಯನ್ನು ಬರೆಯುತ್ತಾರೆ. ಒಮ್ಮೊಮ್ಮೆ ಈ ಸಂಖ್ಯೆ 12ರಿಂದ 15 ಲಕ್ಷ ದ ವರೆಗೂ ತಲುಪಿರುತ್ತದೆ ಇದರಲ್ಲಿ ಹೆಚ್ಚಿನ ಜನ ಐಎಎಸ್ ಪರೀಕ್ಷೆ ಹೇಗಿರುತ್ತೆ ಒಂದು ಸಾರಿ ನೋಡೋಣ ಎಂದು ಅರ್ಜಿ ಸಲ್ಲಿಸುವವರೇ ಹೆಚ್ಚು. ಇದು ಭಾರತದ ಅತ್ಯಂತ ಕಠಿಣ ಪರೀಕ್ಷೆ ಎಂದು ಕರೆಯಲ್ಪಡುತ್ತದೆ. ಇತ್ತೀಚಿಗೆ ಹೆಚ್ಚು ಸುದ್ದಿಯಲ್ಲಿರುವ ಚಾಟ್ ಜಿಪಿಟಿಗೆ ಯುಪಿಎಸ್ಸಿ ಪ್ರಶ್ನೆ ಪತ್ರಿಕೆ ನೀಡಿದಾಗ ಅದು ಕೇವಲ 30% ಅಂಕಗಳನ್ನು ಗಳಿಸಿತು ಎಂದರೆ ಈ ಪರೀಕ್ಷೆಯ ಕಠಿಣತೆ ನಿಮಗೆ ಮನವರಿಕೆ ಆಗಬಹುದು. ಹಾಗಂತ ಇದೇನು ಪಾಸ್ ಮಾಡಲಿಕ್ಕಾಗದ ಪರೀಕ್ಷೆಯಂತೂ ಅಲ್ಲವೇ ಅಲ್ಲ ಏಕೆಂದರೆ ಪ್ರತಿವರ್ಷ 800 ಜನ ಅಭ್ಯರ್ಥಿಗಳು ಆಯ್ಕೆ ಆಗಿಯೇ ಆಗುತ್ತಾರೆ. ಆದರೆ ಈ ಪರೀಕ್ಷೆಯು ಉಳಿದೆಲ್ಲ ಪರೀಕ್ಷೆಗಿಂತ ಹೆಚ್ಚು ತಾಳ್ಮೆ, ಸಮಯ, ಶಕ್ತಿಯನ್ನ ಬೇಡುತ್ತದೆ.ಕಾರಣ ಇದಕ್ಕೆ ಇಂತಿಷ್ಟೇ ಎಂಬ ನಿರ್ದಿಷ್ಟ ಪಠ್ಯವಿಲ್ಲ. ಆದ್ದರಿಂದ ಪ್ರಶ್ನೆಗಳು ಎಲ್ಲಿಂದ ಬೇಕಾದರೂ ಬರಬಹುದು. ಈ ಕಾರಣದಿಂದಾಗಿ ಈ ಪರೀಕ್ಷೆಗೆ ಎಷ್ಟು ತಯಾರಿ ಮಾಡಿಕೊಂಡರು ಕಡಿಮೆಯೇ. ಯುಪಿಎಸ್ಸಿಯು ನಡೆಸುವ ಸಿವಿಲ್ ಸರ್ವಿಸ್ ಪರೀಕ್ಷೆಯ ಕುರಿತಂತೆ ಮತ್ತೊಂದು ಅಂಕಣದಲ್ಲಿ ವಿವರವಾಗಿ ತಿಳಿಸುತ್ತೇನೆ. ಇಂತಹ ಕಬ್ಬಿಣದ ಕಡಲಿನಂತಹ ಪರೀಕ್ಷೆಯನ್ನು ರಿಕ್ಷಾ ಚಾಲಕನ ಮಗನೊಬ್ಬ ಪಾಸಾದದ್ದು ನಿಜವಾಗಿಯೂ ಒಂದು ರೋಮಾಂಚನಕಾರಿಯಾದ ಸುದ್ದಿ. ಹಾಗಾದರೆ ಬನ್ನಿ ಸ್ನೇಹಿತರೆ ಯಾರು ಆ ಸಾಧಕ ಎಂಬುದನ್ನ ಇವತ್ತಿನ ಈ ಅಂಕಣದಲ್ಲಿ ತಿಳಿದುಕೊಳ್ಳೋಣ.
ಸ್ನೇಹಿತರೆ ಆ ಬಾಲಕ 11 ವರ್ಷದವನಾಗಿದ್ದಾಗ ತನ್ನ ಸ್ನೇಹಿತರ ಮನೆಗೆ ಆಟವಾಡಲು ಹೋದಾಗ ಈತನೊಬ್ಬ ರಿಕ್ಷಾ ಚಾಲಕನ ಮಗ ಎಂದು ಅವನನ್ನು ಅವಮಾನಿಸಿ ಅಲ್ಲಿಂದ ಓಡಿಸಿ ಕಳಿಸಿದ್ದರು. 11ರ ಆ ಎಳೆಯ ಬಾಲಕನಿಗೆ ಇದರ ನಿಜವಾದ ಕಾರಣ ಅರ್ಥವಾಗಿರಲಿಲ್ಲ. ಆದರೆ ಹಿರಿಯರೊಬ್ಬರು “ಎಲ್ಲಿಯವರೆಗೆ ನೀನು ಬೆಳೆದು ಒಬ್ಬ ದೊಡ್ಡ ವ್ಯಕ್ತಿಯಾಗುವುದಿಲ್ಲವೋ ಅಲ್ಲಿಯವರೆಗೆ ಜನ ನಿನಗೆ ಗೌರವವನ್ನು ಕೊಡುವುದಿಲ್ಲ” ಎಂದು ಅವನಿಗಾದ ಅವಮಾನವನ್ನ ಮನವರಿಕೆ ಮಾಡಿಕೊಟ್ಟಾಗಲೇ ಆತನಲ್ಲಿ ತಾನೊಬ್ಬ ದೊಡ್ಡ ವ್ಯಕ್ತಿಯಾಗಬೇಕೆಂಬ ಛಲ ಹುಟ್ಟಿದ್ದು. ಆತನ ಹೆಸರು ಗೋವಿಂದ ಜೈಸ್ವಾಲ್.
ಛಲವೇನೋ ಹುಟ್ಟಿತ್ತು ಆದರೆ ಅದನ್ನು ಸಾಕಾರಗೊಳಿಸಿಕೊಳ್ಳಲು ಮನೆಯ ಆರ್ಥಿಕ ಪರಿಸ್ಥಿತಿ ತೊಡಕಾಲು ಬಡಿದಿತ್ತು. ಗೋವಿಂದ ಅವರ ತಂದೆಯು ಸರ್ಕಾರಿ ರೇಷನ್ ಕೇಂದ್ರದಲ್ಲಿ ಕೆಲ ಕಾಲ ಕೆಲಸ ಮಾಡಿ ಸೈಕಲ್ ರಿಕ್ಷಾ ಒಂದನ್ನು ಖರೀದಿಸಿದ್ದರು. ಶ್ರವಣದ ಸಮಸ್ಯೆ ಮತ್ತು ಗಾಯಗೊಂಡ ಕಾಲುಗಳಿಂದಲೇ ಆತ ಸೈಕಲ್ ರಿಕ್ಷಾ ನಡೆಸಿ ತನ್ನ ಮೂರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟನು. ಹೀಗಾಗಿ ಮನೆಯ ಎಲ್ಲ ಸದಸ್ಯರ ಚಿತ್ತ ಈಗ ಗೋವಿಂದನ ಮೇಲೆ ನೆಟ್ಟಿತ್ತು. “ವಿದ್ಯಾಭ್ಯಾಸ ಮಾಡಿ ನೀನೇನು ಸಾಧಿಸುವೆ ಹೆಚ್ಚು ಅಂದರೆ ಇನ್ನೊಂದು ಸೈಕಲ್ ರಿಕ್ಷಾ ಕೊಂಡುಕೊಳ್ಳಬಹುದು ಅಷ್ಟೇ” ಎಂಬ ಕುಹಕದ ಮಾತುಗಳ ನಡುವೆ ಅವನ ಯಶಸ್ಸಿನ ಪಯಣ ಸುಗಮವಾಗಿರಲಿಲ್ಲ. ಆದರೆ ಅವನಿಗೆ ಅವನ ಕುಟುಂಬವು ಇನ್ನಿಲ್ಲದಂತೆ ಪ್ರೋತ್ಸಾಹ ನೀಡಿತು. ಅವನನ್ನು ಐಎಎಸ್ ಕೋಚಿಂಗ್ಗಾಗಿ ದೆಹಲಿಗೆ ಕಳಿಸಲು ತಮ್ಮ ಬಳಿ ಇದ್ದ ತುಂಡು ಜಮೀನನ್ನು ಮಾರಿದ್ದರು ಅವರ ತಂದೆ. ಈ ನಡುವೆ ಅವರ ತಂದೆಯ ಕಾಲಿನ ಆರೋಗ್ಯ ಮತ್ತಷ್ಟು ಹದಗೆಟ್ಟು ಅವರು ರಿಕ್ಷಾ ನಡೆಸುವುದನ್ನು ನಿಲ್ಲಿಸಬೇಕಾಯಿತು. ಒಂದೆಡೆ ನೆರೆಯವರ ಕುಹಕದ ಮಾತು, ಮತ್ತೊಂದೆಡೆ ಕಿತ್ತು ತಿನ್ನುವ ಆರ್ಥಿಕ ಸಂಕಟದ ನಡುವೆಯೇ ಐಎಎಸ್ ಪರೀಕ್ಷೆಯ ತಯಾರಿಗೆಂದು ದೆಹಲಿಗೆ ಬಂದ ಗೋವಿಂದ ಜೈಸ್ವಾಲನು ಹಗಲಿರುಳು ಎನ್ನದೆ ಹಠಕ್ಕೆ ಬಿದ್ದಂತೆ ಅಭ್ಯಾಸ ಆರಂಭಿಸಿದ. ಗಣಿತ ಟ್ಯೂಷನ್ ತರಗತಿಗಳನ್ನು ಆರಂಭಿಸಿ, ಅದರಿಂದ ಬಂದ ಹಣದಲ್ಲಿಯೇ ತನ್ನ ತಿಂಗಳ ಖರ್ಚನ್ನು ನೀಗಿಸುತ್ತಿದ್ದ. ಒಮ್ಮೊಮ್ಮೆಯಂತೂ ಹಣವನ್ನು ಉಳಿಸಲು ಮಧ್ಯಾಹ್ನದ ಊಟವನ್ನೇ ಮಾಡುತ್ತಿರಲಿಲ್ಲ. ಆತನಿಗೆ ಒಂದು ಮಾತು ಸ್ಪಷ್ಟವಾಗಿ ಅರ್ಥವಾಗಿತ್ತು, ತಾನು ಯಶಸ್ಸು ಸಾಧಿಸುವವರೆಗೂ ತನ್ನ ಮನೆಯ ಪರಿಸ್ಥಿತಿ ಸುಧಾರಣೆ ಆಗುವುದಿಲ್ಲ ಎಂದು. ಹೀಗಾಗಿ ಆತ ಹಗಲು ರಾತ್ರಿಗಳೆರಡನ್ನು ಒಂದು ಮಾಡಿ ಅಭ್ಯಾಸ ಮಾಡಿದ. ಆತನೇ ಒಂದು ಟಿವಿ ಸಂದರ್ಶನದಲ್ಲಿ ಹೇಳಿರುವಂತೆ “ನನ್ನ ಬಳಿ ಎರಡು ಅಥವಾ ಮೂರನೇ ಅಟ್ಟೆಂಪ್ಟ್ ಮಾಡಲು ಆರ್ಥಿಕ ಶಕ್ತಿ ಇರಲಿಲ್ಲ ಹಾಗಾಗಿ ನನ್ನ ಬಳಿ ಇದ್ದದ್ದು ಕೇವಲ ಒಂದೇ ಒಂದು ಅವಕಾಶ” ಎಂದು. ಹೀಗಾಗಿ ಆತ ಹಗಲು-ರಾತ್ರಿಗಳೆರಡನ್ನು ಒಂದು ಮಾಡಿ ಅಭ್ಯಾಸ ಮಾಡಿದ ಕಾರಣ,ವಾರಣಾಸಿಯ ಸರ್ಕಾರಿ ಶಾಲೆಯ ಸಾಮಾನ್ಯ ಮತ್ತು ಸರಾಸರಿ ಹುಡುಗನಾದ ಗೋವಿಂದನು ತನ್ನ ಮೊದಲ ಪ್ರಯತ್ನದಲ್ಲಿಯೇ 48ನೇ ರಾಂಕ್ ನೊಂದಿಗೆ ಐಎಎಸ್ ಅಧಿಕಾರಿಯಾಗುವ ಮೂಲಕ ತನ್ನ ಹಠವನ್ನು ತೀರಿಸಿಕೊಂಡಿದ್ದ ಅದು ಕೇವಲ 22ನೇ ವಯಸ್ಸಿನಲ್ಲಿ.
ಸ್ನೇಹಿತರೆ ಗೋವಿಂದ ಜೈಸ್ವಾಲ್ ರ ಕಥೆಯ ಮೂಲಕ ನಾವು ತಿಳಿದುಕೊಳ್ಳಬೇಕಾದ ಸಂಗತಿ ಏನೆಂದರೆ ಕಠಿಣ ಪರಿಶ್ರಮ, ಆತ್ಮ ವಿಶ್ವಾಸ, ಸಾಧಿಸಿಯೇ ತೀರುತ್ತೇನೆ ಎಂಬ ಛಲವಿದ್ದರೆ ಯುಪಿಎಸ್ಸಿ ಪರೀಕ್ಷೆಯೇನು ಕಬ್ಬಿಣದ ಕಡಲೆಯಲ್ಲ ಎಂಬುದು. ನಿಮ್ಮ ಕುಟುಂಬದ ಹಿನ್ನೆಲೆ, ನಿಮ್ಮ ತಂದೆಯ ಕೆಲಸ, ನಿಮ್ಮ ಆರ್ಥಿಕ ಪರಿಸ್ಥಿತಿ ಇವು ಯಾವುವು ಯುಪಿಎಸ್ ಯ ಪರೀಕ್ಷೆಯಲ್ಲಿ ಗಣನೆಗೆ ಬರುವುದಿಲ್ಲ. ಯಶಸ್ವಿ ಸಾಧಕರು ಮತ್ತು ವಿಫಲಗೊಂಡ ಅಭ್ಯರ್ಥಿಗಳ ನಡುವೆ ಇರುವ ಅಂತರ ಕೇವಲ ಪರಿಶ್ರಮ ಅಷ್ಟೇ. ನೀವು ನಿಮ್ಮ ಯಶಸ್ಸಿನ ಹಾದಿಯಲ್ಲಿ ಬರುವ ಎಲ್ಲ ಚಂಚಲತೆಗಳನ್ನು ಮೆಟ್ಟಿ ನಿಂತು ಕಠಿಣ ಪರಿಶ್ರಮ ಮಾಡಿದ್ದೆ ಆದರೆ ಮುಂದಿನ ಗೋವಿಂದ ಜೈಸ್ವಾಲ್ ನೀವೇ ಆಗಬಹುದು. ಹಾಗಾಗಿ ನಿಮ್ಮ ಆತ್ಮವಿಶ್ವಾಸದ ಮೇಲೆ ನಂಬಿಕೆ ಇರಲಿ, ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ಅಚಲವಾದ ನಂಬಿಕೆ ಇರಲಿ.

ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ನಮಸ್ಕಾರ.

Recent Posts

Copra: ತಿಪಟೂರು ತೆಂಗು ಬೆಳೆಗಾರರಿಗೆ ಬಂಪರ್: ನಾಗಾಲೋಟದಲ್ಲಿ ಉಂಡೆ ಕೊಬ್ಬರಿ ದರ

ಉಂಡೆ ಕೊಬ್ಬರಿ ದರ ನಾಗಾಲೋಟದಲ್ಲಿ ಏರಿಕೆ ಕಂಡಿದ್ದು, ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಉತ್ತಮ ಬೇಡಿಕೆ ಇರುವುದರಿಂದ…

56 years ago

ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಆಕಾರಬಂದ್ ಚೆಕ್ ಮಾಡುವುದು ಹೇಗೆ? ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ನಿಮ್ಮ ಜಮೀನಿನ ಆಕಾರಬಂದ್…

56 years ago

ಗೃಹಲಕ್ಷ್ಮೀ: ಅರ್ಹ ಮತ್ತು ಅನರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ಇದರಲ್ಲಿ ನಿಮ್ಮ ಮನೆಯವರ ಹೆಸರು ಇದೆಯಾ ಚೆಕ್ ಮಾಡಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ದಸರಾ ಹಬ್ಬದ ನಿಮಿತ್ತವಾಗಿ ಇತ್ತೀಚೆಗಷ್ಟೇ…

56 years ago

ಪಿಎಂ ಕಿಸಾನ್: ಇಲ್ಲಿಯವರೆಗೆ ನಿಮಗೆ ಎಷ್ಟು ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ  ನಿಮ್ಮ ಖಾತೆಗೆ ಎಷ್ಟು…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯ – ಹೊಸ ನಿಯಮಗಳು ಮತ್ತು ಪರಿಣಾಮ

ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯವಾಗಿದೆ. ಈ ಹೊಸ ನಿಯಮದ ಉದ್ದೇಶ, ಹೇಗೆ ಕೆಲಸ ಮಾಡುತ್ತದೆ, ರೈತರಿಗೆ ಲಾಭ-ನಷ್ಟಗಳು ಏನು…

56 years ago