ರಾಜ್ಯದ 38 ಲಕ್ಷ ರೈತರಿಗೆ 30 ಸಾವಿರ ಕೋಟಿ ರೂಪಾಯಿ ಹಣವನ್ನು ಶೂನ್ಯ ಬಡ್ಡಿಯಲ್ಲಿ ಕೃಷಿ ಸಾಲ ವಿತರಿಸುವ ಗುರಿವಹಿಸಿದೆ. ಹೌದು ಪ್ರಾಕೃತಿಕ ವೈಪರೀತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವ ರೈತರಿಗೆ ರಾಜ್ಯ ಸರ್ಕಾರ ಈ ಬಾರಿ ಉದಾರವಾಗಿ ಆರ್ಥಿಕ ಸಹಕಾರ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ರೈತರಿಗೆ ಭರ್ಪೂರ ಕೊಡುಗೆ ನೀಡಿದ್ದಾರೆ. ಸಹಕಾರ ಇಲಾಖೆ ಮೂಲಕ ರೈತರಿಗೆ ಆರ್ಥಿಕ ಸಹಕಾರಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. 38 ಲಕ್ಷ ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ 30 ಸಾವಿರ ಕೋಟಿ ರೂಪಾಯಿ ಕೃಷಿ ಸಾಲ ನೀಡಲಾಗುವುದು. ಸಹಕಾರ ಆಡಳಿತಕ್ಕೆ ತಾಂತ್ರಿಕ ಸ್ಪರ್ಶ ನೀಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.
2025-26 ನೇ ಸಾಲಿನಲ್ಲಿ 37 ಲಕ್ಷ ರೈತರಿಗೆ 28 ಸಾವಿರ ಕೋಟಿ ರೂಪಾಯಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಕಳೆದ ಫೆಬ್ರವರಿ ತಿಂಗಳಾಂತ್ಯಕ್ಕೆ 25 ಲಕ್ಷ ರೈತರಿಗೆ 22 ಸಾವಿರ ಕೋಟಿ ರೂಪಾಯಿ ಕೃಷಿ ಸಾಲ ವಿತರಿಸಲಾಗಿದೆ. 2026-27ನೇ ಸಾಲಿನಲ್ಲೂ ಶೂನ್ಯ ಬಡ್ಡಿ ದರದ ಸಾಲವನ್ನು ಮುಂದುವರಿಸುವ ಘೋಷಣೆ ಮಾಡಿದ್ದು, 38 ಲಕ್ಷ ರೈತರಿಗೆ ಸಾಲ ವಿತರಣಿಗಾಗಿ 30 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.
ಕೋಲಾರ ಜಿಲ್ಲೆಯಲ್ಲಿ ರೈತ ಮಾಲ್
ರೈತರಿಗೆ ಗುಣಮಟ್ಟದ ಕೃಷಿ ಪರಿಕರಗಳು ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡಲು ಮತ್ತು ಮಾರುಕಟ್ಟೆಯ ಅನಿಶ್ಚಿತತೆ ನಿವಾರಿಸುವ ಉದ್ದೇಶದಿಂದ ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ಲಭ್ಯವಾಗಿಸಲು ಪ್ರಾಯೋಗಿಕವಾಗಿ ರೈತ ಮಾಲ್ ಸ್ಥಾಪನೆ ಮಾಡಲಾಗುತ್ತದೆ. ಈ ನೂತನ ಪರಿಕಲ್ಪನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಎಲ್ಲಾ ತಾಲೂಕಿನಲ್ಲಿ ಎಂಎಸ್ಐಎಲ್ ವತಿಯಿಂದ ರೈತ ಮಾಲ್ ಸ್ಥಾಪಿಸುವ ಭರವಸೆ ನೀಡಲಾಗಿದೆ.
ಗ್ರಾಮ ಪಂಚಾಯತಿಗೆ ಸೋಲಾರ್ ಮೈಕ್ರೋ ಗ್ರಿಡ್
ಗ್ರಾಮ ಪಂಚಾಯತಿಗಳ ಮೇಲೆ ಸೋಲಾರ್ ಮೈಕ್ರೋ ಗ್ರಿಡ್ ಸ್ಥಾಪನೆ ಮಾಡಿ ವಿದ್ಯುತ್ ಬಿಲ್ ಕಡಿತ ಮಾಡುವ ಅನಂತ ಯೋಜನೆಯನ್ನು ಸರ್ಕಾರ ಘೋಷಣೆ ಮಾಡಿದೆ. ವಿದ್ಯುಚ್ಥಕ್ತಿ ಬಿಲ್ ಪಾವತಿಯಲ್ಲಿ ಗ್ರಾಪಂಗಳನ್ನು ಸ್ವಯಂ ಸುಸ್ಥಿರಗೊಳಿಸಲು ಹಾಗೂ ಅವಶ್ಯ ಇರುವ ವಾರ್ಷಿಕ 4 ಸಾವಿರ ಎಂಡಬ್ಲು ವಿದ್ಯುಚ್ಛಕ್ತಿ ಉತ್ಪಾದಿಸುವ ಸೋಲಾರ್ ಮೈಕ್ರೋ ಗ್ರಿಡ್ ಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅನಂತ ಯೋಜನೆಯಡಿ ಜಾರಿಗೆ ತಂದಿದೆ.
ಸಿರಿಧಾನ್ಯ ಸಾವಯವ ಉತ್ಪನ್ನಕ್ಕೆ ಮಿಲೆಟ್ ಹಬ್
ರಾಜ್ಯದಲ್ಲಿ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ಮಿಲೆಟ್ ಹಬ್ ನಿರ್ಮಿಸಲಾಗುತ್ತಿದೆ. ಇದರಡಿ ರೈತರು, ಗ್ರಾಮೀಣ ಯುವಕರು ಮತ್ತು ನವೋದ್ಯಮಿಗಳಿಗೆ ತಾಂತ್ರಿಕ ಸಹಾಯ, ಸಂಸ್ಕರಣಾ ಸೌಲಭ್ಯ ಗುಣಮಟ್ಟ ಪ್ರಮಾಣೀಕರಣ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಸ್ವಾವಲಂಬಿ ಸಂಸ್ಥೆಯನ್ನಾಗಿಸುವುದಾಗಿ ಪ್ರಸ್ತಾಪಿಸಲಾಗಿದೆ.
ಮೆಕ್ಕೆಜೋಳಕ್ಕೆ ಆರ್ಥಿಕ ನೆರವು
ಮೆಕ್ಕೆಜೋಳ ಖರೀದಿಗೆ ಸರ್ಕಾರದಿಂದ 100 ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು. ಮೆಕ್ಕೆ ಜೋಳ ಬೆಲೆ ಕುಸಿತದಿಂದ ಕಂಗಾಲಾದ ಬೆಳೆಗಾರರ ನೆರವಿಗೆ ಸರ್ಕಾರ ಬಂದಿದೆ. ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮೆಕ್ಕೆ ಜೋಳ ಖರೀದಿಸಲು 100 ಕೋಟಿ ರೂಪಾಯಿ ನೆರವು ಘೋಷಿಸಿದೆ. ಉಗ್ರಾಣ ನಿಗಮಕ್ಕೆ ಆರ್ಥಿಕವಾಗಿ ಚೈತನ್ಯ ನೀಡಲು ನಿಗಮದ ಅನುಪಯುಕ್ತ ಆಸ್ತಿಗಳನ್ನು ನಗದೀಕರಣಗೊಳಿಸಲು ಉದ್ದೇಶಿಸಿದೆ.
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t